ಸಂಚಿಕೆ ೨: ಎಲ್ಲವೂ ಆನಂದಮಯ !!
ನಾಣಿ ಭಟ್ರ ಪರಿವಾರದ ಕಥೆ ಕೇಳೋಕೆ ಬಂದಿದ್ದೀರಾ? ಇವತ್ತಿನ ಕಥೆ ನಾನು ಹೇಳ್ತೇನೆ ಕೇಳಿ. ನನ್ನ ಹೆಸರು ಚಿಕ್ಕು. ಇಗೋ ಇಲ್ಲಿ ನನ್ನ ಪಕ್ಕ ದೇವದಾಸ್ ತರಹ ಕೂತಿದ್ದಾನಲ್ಲ ಇವನು ನಿಮಗೆ ಗೊತ್ತಿರಬೇಕಲ್ಲ, ಭಟ್ರ ಕಿರಿಯ ಮಗ ಆನಂದ ಆದರೆ ಇವತ್ತು ಅವನ ಆನಂದ ಮಾಯವಾಗಿದೆ. ಯಾಕೆ ಅಂತೀರಾ? ಇವತ್ತು ಯಾಕೆ ಅಂತ ನನಗೆ ಇನ್ನೂ ಗೊತ್ತಿಲ್ಲ, ಅಮ್ಮ ಮನೆ ಒಳಗಿಂದ ಹೊರಗೆ ಆತಂಕದಲ್ಲಿ ಓಡಾಡ್ತಾ ಇದ್ದಾರೆ. ಯಾಕೆ ಅಂತ ತಿಳೀತಾ ಇಲ್ಲ. ಇವನು ಬೇರೆ ಅಳೋದು ಬಿಟ್ಟು ಎನೂ ಹೇಳ್ತಾ ಇಲ್ಲ. ಇವತ್ತಿನ ಕಥೆ ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಬಿಡಿ. ಅಲ್ಲಿವರೆಗೂ ನೀವು ಆನಂದನ ಹಳೆ ಕಥೆಗಳನ್ನು ಕೇಳಿ. ಇವನು ಪ್ರತಿ ಸರಿ ಏನಾದ್ರೂ ಎಡವಟ್ಟು ಮಾಡಿದಾಗೆಲ್ಲ ಇಲ್ಲೇ ಬಂದು ಕೂರೋದು. ಕೆಲವೊಂದು ಸಾರಿ ನನ್ನ ಹತ್ರ ಹೇಳ್ತಾನೆ ಏನಾಯ್ತು ಅಂತ, ಇಲ್ಲಾಂದ್ರೆ ಆಮೇಲೆ ಅಮ್ಮ ಬಂದು ಮಾತಾಡುತ್ತಿರಬೇಕಾದ್ರೆ ವಿಷಯ ಗೊತ್ತಾಗುತ್ತೆ. ಮೊದ ಮೊದಲು ಇವರು ಮಾತಾಡೋದು ಅರ್ಥನೇ ಆಗುತ್ತ ಇರಲಿಲ್ಲ. ಈಗೀಗ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತ ಇದೆ. ಹೋದ ವಾರ ದೊಡ್ಡ ಗಲಾಟೆ ಮಾಡಿದ್ದ. ಈ ಮನೇಲಿ ಏನೇ ಗಲಾಟೆ ಆಗೋದಿದ್ರೂ ಅದು ನಡೆಯುವುದು ಈ ಅಂಗಳದಲ್ಲಿ. ಯಾಕೇಂದ್ರೆ ಭಟ್ರು ಜಾಸ್ತಿ ಸಮಯ ಕಳೆಯೋದೇ ಈ ಜಗಲಿ ಮೇಲೆ ಕೂತು. ಅಮ್ಮ ಕಂಪ್ಲೇಂಟ್ ತಗೊಂಡು ಅಂಗಳಕ್ಕೆ ಬಂದು ಬಿಡ್ತಾರೆ. ಹಾಗಾಗಿ ನಂಗೂ ಎಲ್ಲ ವಿಷಯ ಗೊತ್ತಾಗೋದು. ಆ ದಿನ ಸಂಜೆ ಯಾವತ್ತಿನಂತೆ ಭಟ್ರು ಜಗಲಿ ಮೇಲೆ ಸೊಳ್ಳೆ ಹೊಡೀತಾ ಕೂತಿದ್ದ...